ಜಗತ್ತನ್ನೇ ಅಲ್ಲೋಲ-ಕಲ್ಲೋಲಗೊಳಿಸಿದ ಕರೋನ ಎಂಬ ಸೂಕ್ಷಜೀವಿಯ ಮೊದಲ ಅಲೆಯ ತೀವ್ರತೆಗೆ ಕ್ಷೀಣಿಸದ ಕ್ಷೇತ್ರಗಳಿಲ್ಲ. ಶಿಕ್ಷಣ ಕ್ಷೇತ್ರವೂ ಅಷ್ಟೇ.
೨೦೨೧ ರ ಹೊಸವರ್ಷದಲ್ಲಿ ಕರೋನದ ಪ್ರಭಾವ ಕಡಿಮೆ ಆದ ಹಿನ್ನಲೆಯಲ್ಲಿ ಜಗತ್ತು ನಿಧಾನವಾಗಿ ತನ್ನ ಹಿಂದಿನ ವ್ಯವಹಾರಗಳ ಕಡೆಗೆ ಜಾರಿಕೊಂಡಿತು. ಆರ್ಥಿಕ ಕ್ಷೇತ್ರ ಮತ್ತೆ ಮೈಕೊಡವಿಕೊಂಡು ಮೇಲೆಕ್ಕೆ ಜಿಗಿಯಲು ಹೊರಟಿತು. ಜಗತ್ತಿನಾದ್ಯಂತ ಇರುವ ವಿದ್ಯಾರ್ಥಿಗಳು ಹೊಸ ಆಶಾಭಾವದಿಂದ ಭೌತಿಕ ತರಗತಿಗಳಿಗೆ ಪ್ರವೇಶಿಸಿದರು. ಆದರೆ ಅಷ್ಟು ಸುಲಭದಲ್ಲಿ ಆ ಕರೋನ ಮಾನವಕುಲವನ್ನು ಬಿಟ್ಟುಹೋಗಲು ಸಿದ್ಧವಿರಲಿಲ್ಲ ಎಂಬ ಸತ್ಯ ಕಣ್ಣುಕಟ್ಟಿಕೊಂಡಿತ್ತು. ೨೦೨೧ರ ಏಪ್ರಿಲ್ನಲ್ಲಿ ಎರಡನೆಯ ಅಲೆಯ ರೂಪದಲ್ಲಿ ಕಾಣಿಸಿಕೊಂಡ ಕರೋನವು ಆಧುನಿಕ ಕಾಲದ ಬೃಹತ್ ಮಾನವ ಸಂಶೋಧನೆಗಳ ಚರಿತ್ರೆಯನ್ನು ತಲೆತಗ್ಗಿಸುವಂತೆ ಮಾಡಿತು. ವೈದ್ಯಕೀಯ ಕ್ಷೇತ್ರದ ಅಗತ್ಯ ಸಂಪನ್ಮೂಲಗಳ ಕೊರತೆ ತೀವ್ರವಾಯಿತು. ಆದರೆ ಆರೋಗ್ಯ ಕಾರ್ಯಕರ್ತರ, ಆಡಳಿತ ವ್ಯವಸ್ಥೆಯ ಮತ್ತು ಸಾರ್ವಜನಿಕರ ಧೈರ್ಯ, ಆಶಾಭಾವವು ಕರೋನದ ಮುಂದೆ ನಮ್ಮನ್ನು ಇಂದಿಗೂ ಎದೆಯುಬ್ಬಿಸಿ ನಿಲ್ಲಿಸಿದೆ ಎಂಬುದಕ್ಕೆ ತರ್ಕವಿರದು.
ಮೇ ತಿಂಗಳ ಆರಂಭದ ದಿನದಿಂದ ನನ್ನ ಮನೆಯಲ್ಲಿ ಕಾಣಿಸಿಕೊಂಡ ಜ್ವರ, ಶೀತ ಒಂದೆರಡು ದಿನದಲ್ಲಿ ನನ್ನ ಮನೆಯವರನ್ನೆಲ್ಲಾ ಕಾಡಿತು. ಜ್ವರದ ಆರಂಭದ ದಿನದಿಂದಲೇ ಸ್ಥಳೀಯ ವೈದ್ಯರಿಂದ ಔಷಧಿ ತೆಗೆದರೂ ಜ್ವರ ಕಡಿಮೆ ಆಗಲಿಲ್ಲ. ದಿನಗಳೊಳಗೆ ರಾತ್ರಿ ವೇಳೆ ವಿಪರೀತ ಜ್ವರ, ಬೆಳಿಗ್ಗೆ ಏಳುವಾಗ ಸಹಿಸಲಾಗದಂತೆ ಮೈ-ಕೈ ನೋವು, ಕ್ಷೀಣ, ಶೀತ, ಕೆಮ್ಮು, ತಲೆಸಿಡಿತ ಕಾಣಿಸಿಕೊಂಡಿತು. ನಮ್ಮೂರಿನಲ್ಲಿ ಕರೋನಕ್ಕಿಂತ ಭೀಕರವಾಗಿ ಡೆಂಗ್ಯೂ ಕಾಡುತ್ತಿದ್ದ/ಹರಡುತ್ತಿದ್ದ ದಿನಗಳಾದುದರಿಂದ ಅಪ್ಪ ಜ್ವರದ ಆರಂಭದಲ್ಲೇ ಡೆಂಗ್ಯೂ ಪರೀಕ್ಷೆ ಮಾಡಿಸಿಕೊಂಡರು. ಡೆಂಗ್ಯೂ ಪರೀಕ್ಷೆಯ ವರದಿ ನೆಗೆಟಿವ್ ಆಗಿತ್ತು. ಹಾಗಿದ್ದ ಕಾರಣ ಅಮ್ಮ, ನಾನು ಡೆಂಗ್ಯೂ ಪರೀಕ್ಷೆ ಮಾಡುವ ಪ್ರಸಂಗ ಬರಲಿಲ್ಲ. ವೈದ್ಯರು ಪುನಃ ಔಷಧಿ ಕೊಟ್ಟು ಕಳುಹಿಸಿದರು. ಸಾಮಾನ್ಯ ಜ್ವರದಂತೆ ಆಹಾರ ಸೇವಿಸುವಾಗ ಕಹಿ ಅನುಭವ ಆಗಿ ಆಹಾರ ರುಚಿಸುತ್ತಿರಲಿಲ್ಲ. ಹೀಗಿರುವಾಗ ಮನೆಮಂದಿಯೆಲ್ಲರ ಮೂಗಿನ ಗ್ರಹಿಕಾ ಸಾಮರ್ಥ್ಯ ಕೂಡ ನಷ್ಟವಾಗಿದೆ ಎಂಬ ವಿಚಾರ ಅರಿವಿಗೆ ಬಂತು. ಮತ್ತೆ ಹೆಚ್ಚು ಆಲೋಚನೆ ಮಾಡಲಿಲ್ಲ. ಅಪ್ಪ ಮತ್ತು ನಾನು ಕೂಡಲೇ ಬೇಡಡ್ಕ ತಾಲೂಕು ಆಸ್ಪತ್ರೆಗೆ ಹೋದೆವು. ಆರ್ಟಿ-ಪಿಸಿಆರ್ ಪರೀಕ್ಷೆ ಮಾಡಿಸಿ ಮನೆಗೆ ವಾಪಾಸಾದೆವು. ನಾವಿಬ್ಬರು ಸ್ಕೂಟಿಯಲ್ಲಿ ಹೊದ ಕಾರಣದಿಂದ ಆ ದಿನ ಅಮ್ಮ ಆರ್ಟಿ-ಪಿಸಿಆರ್ ಪರೀಕ್ಷೆಗೆ ಹೋಗಲಿಲ್ಲ. ಮರುದಿನವೇ ಅಮ್ಮ ಅಪ್ಪನೊಂದಿಗೆ ಸ್ಕೂಟಿಯಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಗೆ ಹೋದರು. ಪರೀಕ್ಷೆ ಮಾಡಿಸಿ ಮಧ್ಯಾಹ್ನದ ವೇಳೆಗೆ ಮನೆಗೆ ತಲುಪಿದರು. ಸ್ವಲ್ಪಹೊತ್ತಲ್ಲೇ ಆರೋಗ್ಯ ಇಲಾಖೆಯವರು ಕರೆ ಮಾಡಿ ನನ್ನ ಹಾಗೂ ಅಪ್ಪನ ಕೋವಿಡ್ ವರದಿ ಪಾಸಿಟಿವ್ ಆಗಿದೆ ಎಂದು ತಿಳಿಸಿಯೇ ಬಿಟ್ಟಿದ್ದರು. ಫಕ್ಕನೆ ಆಘಾತ ಆದರೂ, ಈ ಹಿಂದೆಯೇ ನಾನು ಲಕ್ಷಣಗಳನ್ನು ಆಧರಿಸಿ ಕರೋನ ಪಾಸಿಟಿವ್ ಬಂದರೂ ಆಶ್ಚರ್ಯವಿಲ್ಲ ಎಂಬುದಾಗಿ ಮನಸ್ಸನ್ನು ಹದಮಾಡಿಕೊಂಡಿದ್ದೆ. ಆ ಕಾರಣದಿಂದ ಕೂಡಲೇ ಮಾನಸಿಕವಾಗಿ ಚೇತರಿಸಿಕೊಂಡೆ.
ಅದೇ ದಿನ ಆರೋಗ್ಯ ಇಲಾಖೆಯವರು, ಮರುದಿನ ಬೆಳಿಗ್ಗೆ ಪೋಲಿಸ್ ಠಾಣೆಯವರು ಕರೆಮಾಡಿ ನಮ್ಮ ಆರೋಗ್ಯ ವಿಚಾರಿಸಿದರು. ನನ್ನ ಹಾಗೂ ಅಪ್ಪನ ವರದಿ ಬಂದ ಮರುದಿನ ಅಮ್ಮನ ವರದಿವೂ ಬಂತು. ನಮ್ಮ ಊಹೆ ತಪ್ಪಿರಲಿಲ್ಲ...! ಈ ಹಿಂದೆ 45 ದಿನದ ಹಿಂದೆ ಅಪ್ಪ ಹಾಗೂ 30 ದಿನದ ಹಿಂದೆ ಅಮ್ಮ ಕೋವಿಡ್ ನಿರೋಧಕ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದ್ದರು. 45 ವರ್ಷದ ಕೆಳಗಿನವರಿಗೆ ಲಸಿಕೆ ವಿತರಣೆ ಆರಂಭ ಆಗದ ಕಾರಣದಿಂದ ನಾನು ಲಸಿಕೆ ತೆಗೆದಿಲ್ಲ. ಮನೆಯಲ್ಲೇ ಐಸೋಲೇಶನ್ನಲ್ಲಿರುವಂತೆ ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆಯ ಪ್ರಕಾರ ಸಲಹೆ ಸಿಕ್ಕಿತು. ಆರಂಭದ ದಿನಗಳಲ್ಲಿ ಆತ್ಮೀಯರೊಬ್ಬರು ತಂದುಕೊಟ್ಟ ʻವಿಟಮಿನ್-ಸಿʼ ಮಾತ್ರೆಯನ್ನು ದಿನಕ್ಕೆ ಒಂದರಂತೆ ಸೇವಿಸಿದೆವು. ಪ್ರತಿದಿನ ಆರೋಗ್ಯ ಇಲಾಖೆಯ ಕಾರ್ಯಕರ್ತರು ನಮ್ಮ ಆರೋಗ್ಯ ವಿಚಾರಿಸುತ್ತಿದ್ದರು. ವಿಶೇಷವಾಗಿ ಯಾವುದೇ ಔಷಧಿಯ ಅಗತ್ಯವಿಲ್ಲ, ಜ್ವರ ಇದ್ದರೆ ʻಪ್ಯಾರಾಸಿಟಮೋಲ್ʼ ಸೇವಿಸಬಹುದು, ಹಸಿವಿಲ್ಲದಿದ್ದರೂ ಪೌಷ್ಟಿಕ ಆಹಾರ ಸೇವಿಸಬೇಕು, ಉಗುರು ಬೆಚ್ಚಗಿನ ನೀರು ಕುಡಿಯಬೇಕು, ಶರೀರದ ಆಮ್ಲಜನಕದ ಪ್ರಮಾಣ ಕಡಿಮೆ ಆಗದಿರಲು ಬಿಸಿನೀರಿನ ಸ್ನಾನ ಮಾಡಬೇಕು ಎಂಬುದಾಗಿ ಆರೋಗ್ಯ ಇಲಾಖೆಯವರು ಹೇಳಿದರು. ಪ್ರತಿದಿನ ಅಪ್ಪ-ಅಮ್ಮ ಮೊಟ್ಟೆ ಸೇವಿಸಿದರು. ನೇಂದ್ರ ಹಣ್ಣು ನನ್ನ ಆಹಾರದ ಭಾಗವಾಯಿತು. ಆದರೆ ಜ್ವರ ಕಡಿಮೆ ಆಗದೆ, ಮನೆಯಲ್ಲಿದ್ದ ʻಪ್ಯಾರಾಸಿಟಮೋಲ್ʼ ಮುಗಿದಾಗ ಊರಿನ ಆಶಾಕಾರ್ಯಕರ್ತೆ ʻಪ್ಯಾರಾಸಿಟಮೋಲ್ʼ ತಲುಪಿಸಿದರು. ಕೆಲವು ಸಂಬಂಧಿಕರು, ನೆರೆಮನೆಯವರು ಹಾಗೂ ಆಪ್ತರು ಔಷಧಿ, ಬಾಳೆಹಣ್ಣು, ತರಕಾರಿ, ಆಹಾರ ಸಾಮಾಗ್ರಿಗಳನ್ನು ಮನೆಯ ಸಮೀಪಕ್ಕೆ ತಲುಪಿಸಿ, ಕ್ಷೇಮ ವಿಚಾರಿಸಿ ಹೋಗುತ್ತಿದ್ದರು. ವರದಿ ಬಂದ 3-4 ದಿನಗಳಲ್ಲಿ ಲಕ್ಷಣಗಳು ಕಡಿಮೆ ಆಯಿತು. ಆದರೆ ಸ್ವಣ್ಭ ಜ್ವರ ಹಾಗೂ ಕೆಮ್ಮು ಮತ್ತೂ ಒಂದು ವಾರ ಬೆನ್ನಟ್ಟಿತು. ಆರೋಗ್ಯ ಇಲಾಖೆಯ ಮೂಲಕ ಲಭಿಸಿದ ಬೇಡಡ್ಕ ತಾಲೂಕು ಆಸ್ಪತ್ರೆಯ ಸಹಾಯವಾಣಿಗೆ ಕರೆದು ವೈದ್ಯರೊಂದಿಗೆ ಮಾತನಾಡಿದೆವು. ಜ್ವರ ಹಾಗೂ ಕೆಮ್ಮಿಗೆ ಔಷಧಿ ಕಳುಹಿಸಿಕೊಡುವುದಾಗಿ ಭರವಸೆ ಲಭಿಸಿದರೂ ಯಾವುದೋ ಕಾರಣದಿಂದ ಎರಡು ದಿವಸ ಔಷಧಿ ಬರಲಿಲ್ಲ. ಮರುದಿನ ಸಂಬಂಧಿಕರೊಬ್ಬರ ಮೂಲಕ ಔಷಧಿ ದೊರೆಯಿತು. ಅಂದಿನಿಂದ 4 ದಿನ ʻವಿಟಮಿನ್-ಬಿʼ ಮಾತ್ರೆಯೂ ನಮ್ಮೊಂದಿಗೆ ಸೇರಿಕೊಂಡಿತು.
ವರದಿ ಬಂದ ಆರಂಭದ 2-3 ದಿನ ಸರಾಸರಿ ಹತ್ತು ನಿಮಿಷಕ್ಕೊಂದು ಫೋನ್ ಕರೆಯು ಅಪ್ಪನ ಮೊಬೈಲ್ಗೆ ಬಂತು. ಸಂಬಂಧಿಕರು, ಆಪ್ತರು, ಊರಿನ ಜನರು ಆಗಾಗ ಕರೆದು ಕ್ಷೇಮ ವಿಚಾರಿಸಿ ನಮ್ಮ ಮಾನಸಿಕ ಬಲವನ್ನು ಇನ್ನಷ್ಟು ಹೆಚ್ಚಿಸಿದರು. ನನಗೂ ನನ್ನ ಗೆಳೆಯರು, ಆತ್ಮೀಯರು ವೈಯಕ್ತಿಕವಾಗಿ ಕ್ಷೇಮ ವಿಚಾರಿಸಿದ್ದರು. ಕಾಞ್ಞಂಗಾಡ್ ಜಿಲ್ಲಾ ಆಸ್ಪತ್ರೆಯಿಂದ ಮನೆಗೆ ಕರೆ ಮಾಡಿ ನೈತಿಕ ಬಲ ತುಂಬಿದರು. 4-5 ದಿನಕ್ಕೊಮ್ಮೆ ಪೋಲಿಸ್ ಠಾಣೆಯಿಂದ ನನಗೂ ಅಪ್ಪನಿಗೂ ಕರೆದು, ನಮ್ಮ ವಿಳಾಸ, ಮನೆಯ ಸೌಕರ್ಯಗಳ ಬಗ್ಗೆ ಅದೇ ಪ್ರಶ್ನೆಗಳನ್ನು ಪ್ರತಿ ಬಾರಿ ಕೇಳುತ್ತಾ ವಿರಸ ಹುಟ್ಟಿಸುತ್ತಿದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿ 3 ಬಾರಿ ಮನೆಗೆ ಬಂದು ಕ್ಷೇಮ ವಿಚಾರಿಸಿ ಹೋದರು.
ನಾವು ಮನೆಯಲ್ಲಿ ಐಸೋಲೇಶನ್ನಲ್ಲಿದ್ದಾಗ ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿಯನ್ನು ಬಿಡುಗಡೆಮಾಡಿತು. ಅದರ ಪ್ರಕಾರ ಕರೋನ ವರದಿ ಬಂದು 17 ದಿನ ಮನೆಯಲ್ಲಿ ಐಸೋಲೇಶನ್ ಪೂರ್ತಿಗೊಳಿಸಬೇಕು. ಪುನಃ ಕರೋನ ಪರೀಕ್ಷೆ ಅಗತ್ಯವಿಲ್ಲ ಎಂಬ ಮಾಹಿತಿ ಸಿಕ್ಕಿತು. 12-13 ದಿನಗಳು ಕಳೆದಾಗ ಜ್ಚರ ಕೆಮ್ಮು ಸಂಪೂರ್ಣ ಗುಣವಾಯಿತು. ನಿಧಾನವಾಗಿ ಮೂಗಿನ ಗ್ರಹಿಕಾ ಸಾಮರ್ಥ್ಯ ಹೆಚ್ಚಿತು. ಇದೀಗ ನಾವು ಸಂಪೂರ್ಣ ಚೇತರಿಸಿಕೊಂಡೆವು. (ಗಮನಿಸಿ: ಅತಿಯಾದ ಪ್ಯಾರಾಸಿಟಮೋಲ್ ಅಥವಾ ಸ್ಟಿರೋಯ್ಡ್ ಮಾತ್ರೆಗಳ ಬಳಕೆಯು ಶರೀರಕ್ಕೆ ಮಾರಕವಂತೆ, ಶರೀರದ ನೈಸರ್ಗಿಕ ಪ್ರತಿರೋಧ ಶಕ್ತಿಯನ್ನು ಕಡಿಮೆ ಮಾಡಬಹುದು. ಕರೋನ ಲಕ್ಷಣಗಳು ಇದ್ದರೆ ಶೀಘ್ರವೇ ಟೆಸ್ಟ್ ಮಾಡಿಸಿ; ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿರಿ. ಕ್ಷೇಮವಾಗಿರಿ.)
ಇದೀಗ ಒಂದು ಕಾರ್ಯ ಬಾಕಿ....!!
17 ದಿನದ ಹಿಂದೆ ಮನೆಯಿಂದ 100 ಮೀಟರ್ ದೂರದಲ್ಲಿ ಅನಾಥವಾದ ನಮ್ಮ ಸ್ಕೂಟಿಯ ಆರೋಗ್ಯ ವಿಚಾರಿಸಬೇಕು. ನಾವು ಐಸೋಲೇಶನ್ಗೊಳಪಟ್ಟು ಅಂಗಳ ದಾಟಲಾಗದೆ ಬಾಕಿಯಾದ ಹಿನ್ನೆಲೆಯಲ್ಲಿ ನಮ್ಮ ಸ್ಕೂಟಿಯನ್ನು ಮನೆಗೆ ಕರೆ ತರಲು ಸಾಧ್ಯವಾಗಲಿಲ್ಲ...
ಜಗತ್ತೇ ಇಂದು ಸಂಕಷ್ಟದಲ್ಲಿದೆ... ನಾವು ಹದಿನೇಳು ದಿನ ಅದರ ಭಾಗವಾದೆವು. ಕಳೆದ 17 ದಿನ ಆತಂಕ ಮಧ್ಯೆಯೂ ಹೊಸದೊಂದು ಅನುಭೂತಿಯನ್ನು ನೀಡಿತು. ಭೌತಿಕವಾಗಿಯೂ ಮಾನಸಿಕವಾಗಿಯೂ ನಮಗೆ ಸಹಾಯ, ಸಹಕಾರ, ಆತ್ಮವಿಶ್ವಾಸ ನೀಡಿದ ಎಲ್ಲಾ ಆಪ್ತರು ನನ್ನ ಮನದಲ್ಲಿ ಸದಾ ಕಾಲ ಅಮರ.....
೧೮ ನೆಯ ದಿನ : ಬೆಳಿಗ್ಗೆ ಹೋಗಿ ಸ್ಕೂಟಿ ಸ್ಟಾರ್ಟ್ ಮಾಡಿದೆವು. 2-3 ನಿಮಿಷ ಹರಸಾಹಸ ಪಟ್ಟರೂ ಸ್ಟಾರ್ಟ್ ಆಯಿತು. ಹಾಗೆ ಸ್ಜೂಟಿ ಮನೆಗೆ ತಲುಪಿತು.
|| ಅಭಿಜಿತ್.ಕೆ.ಜೆ ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ