ಆ ದೃಶ್ಯ ನನ್ನ ಮನಸ್ಸಿನಿಂದ ಮಾಯವಾಗುತ್ತಿಲ್ಲ. ಕಾಲ ಮುಂದುವರಿದಿದೆ ಎನ್ನುವುದು ನಿಜ. ಆದರೆ ಕಾಲ ಚಕ್ರದ ವೇಗಕ್ಕೆ ಹೊಂದಿಕೊಳ್ಳಲಾಗದೆ ಜೀವನದ ಬಂಡಿಯನ್ನು ಎಳೆಯಲು ಸಾಹಸ ಮಾಡುವ ಆ ಜೀವಗಳು ಏನು ತಪ್ಪು ಮಾಡಿದೆಯೋ ನನಗೆ ಗೊತ್ತಿಲ್ಲ.
ಇತ್ತೀಚಿಗೆ ಮೊಬೈಲ್ ಕಂಪೆನಿಗಳು ತಮ್ಮ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಎಷ್ಟೋ ಕಷ್ಟಪಡುತ್ಹಿವೆ ಅಲ್ಲವೇ ? ಹಿಂದೆ ಗ್ರಾಹಕರು ಸೇವಾದಾರರ ಹಿಂದೆ ಓಡಾಡುತ್ತಿದ್ದರೆ ಇಂದು ಸೇವಾದಾರರು ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಪೈಪೋಟಿ ಮಾಡುತ್ತಿವೆ ಎನ್ನುವುದು ನಿಜ. ಅತ್ಯಂತ ವೇಗದ ಅಂತರ್ಜಾಲ ಮತ್ತು ದೂರವಾಣಿ ವ್ಯವಸ್ಥೆ ಕಲ್ಪಿಸವ ಸಲುವಾಗಿ ಇಂದು ದೇಶದಾದ್ಯಂತ Optical Fiber Cable (OFC) ಸರಪಳಿ ನಿರ್ಮಿಸುತ್ತಿದೆ.
ನಾನು ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣ ಮಾಡುತ್ತಿರುವಾಗ ಕಂಡ ಆ ಎರಡು ದ್ರಶ್ಯಗಳಲ್ಲಿ ಒಂದು ನನ್ನಲ್ಲಿ ದುಃಖ ಉಂಟು ಮಾಡಿತು. ಮೊದಲನೆಯದು ಕೇರಳದಲ್ಲಿ ಮೊಬೈಲ್ ಕಂಪೆನಿಯೊಂದು OFC ಕೇಬಲ್ ಹಾಕುವ ಸಲುವಾಗಿ ನಾಲ್ಕು - ಐದು ಜನರ ತಂಡ ಜೆ.ಸಿ.ಬಿ ಯ ಮೂಲಕ ಸುಮಾರು ೫ ಅಡಿ ಆಳವಾದ ಮತ್ತು ೧ ಅಡಿ ಅಗಲವಾದ ಹೊಂಡಗಳನ್ನು ರಸ್ತೆ ಬದಿಯಲ್ಲಿ ಉದ್ದಕ್ಕೆ ತೆಗೆಯುತ್ತಿತ್ತು. ಕೆಲವೇ ಕೇಲವು ದಿನಗಳಲ್ಲಿ ಆ ಕೆಲಸ ಪೂರ್ಣಗೊಂಡಿತ್ತು. ಆ ಕೆಲಸ ನಡೆಯುತ್ತಿರುವಾಗ ನಾನು ಅಲ್ಲಿನ ರಸ್ತೆಯ ಮೂಲಕ ಪ್ರಯಾಣಿಸುವಾಗ ನನ್ನ ಕಣ್ಣಲ್ಲಿ ನೀರು ಬಂತು. ಕಾರಣವೇನೆಂದರೆ ಆ ಅಗಲ ಕಿರಿದಾದ ರಸ್ತೆಯಲ್ಲಿ ಹೋಂಡ ತೆಗೆದ ಮಣ್ಣಿನ ಧೂಳಿನಿಂದ ಕಣ್ಣಲ್ಲಿ ಕಂಬನಿ ಬಂತು. ಕೆಲವು ದಿನಗಳ ಬಳಿಕ ಸುಳ್ಯ - ಕೋಲ್ಚಾರ್ ರಸ್ತೆಯಲ್ಲಿ OFC ಕೇಬಲ್ ಹಾಕುವ ಕಾಮಗಾರಿ ಆರಂಭಗೊಂಡಿತು. ಆದರೆ ಅಲ್ಲಿ ಯಾವುದೇ ಯಂತ್ರಗಳನ್ನು ಕಾಣಲು ಸಾಧ್ಯವಾಗಲಿಲ್ಲ. ಬದಲಾಗಿ ಅಲ್ಲಿ ಇದ್ದದ್ದು ೫೦-೬೦ ಜನರ ಶ್ರಮಿಕರ ಗುಂಪು, ಮಣ್ಣು ಅಗೆಯುವ ಕೈ ಸಲಕರಣೆಗಳು ಮತ್ತು ಪುಟ್ಟ ತಾತ್ಕಾಲಿಕ ಗುಡಿಸಲು ಸಮೂಹ ಮಾತ್ರ. ಅಲ್ಲಿ ಅವರು ರಸ್ತೆ ಬದಿ ಮಣ್ಣು ಅಗೆದು ಹೊಂಡ ತೆಗೆಯುತ್ತಿರಬೇಕಾದರೆ ವಾಹನವೊಂದರಲ್ಲಿ ಪ್ರಯಾಣಿಸುತ್ತಿರಬೇಕಾದರೆ ನನ್ನ ಕಣ್ಣಲ್ಲಿ ನೀರು ಬಂತು. ಅದಕ್ಕೆ ಕಾರಣ ಅಲ್ಲಿನ ಧೂಳು ಏನಲ್ಲ ; ಬದಲಾಗಿ ಅಲ್ಲಿ ಎಲ್ಲಿಂದಲೋ ತಾತ್ಕಾಲಿಕವಾಗಿ ಬಂದು ದುಡಿಯುತ್ತಿದ್ದ ಆ ಶ್ರಮಿಕರ ಗುಂಪು. ಆರು ವಯಸ್ಸಿನಿಂದ ಹದಿನೆಂಟು ವಯಸ್ಸಿನ ಸುಮಾರು ಹದಿನಯ್ದು ಮಕ್ಕಳು ಆ ಗುಂಪಿನಲ್ಲಿ ದುಡಿಯುತ್ತಿದ್ದರು. ಅವರೆಲ್ಲ ನನ್ನ ಆಸುಪಾಸಿನ ವಯಸ್ಸಿನವರೇ ಆಗಿದ್ದರು. ಮಹಿಳೆಯರು - ಪುರುಷರು - ಮಕ್ಕಳು ಭೇದವಿಲ್ಲದೆ ಎಲ್ಲರೂ ಸಮಾನವಾಗಿ ದುಡಿಯುತ್ತಿದ್ದರು. ಆ ದೃಶ್ಯ ನೋಡಿದರೆ ಕಣ್ಣು ನೆನೆಯದವರು ಮಾನವ ಕುಲಕ್ಕೆ ಅವಮಾನ. ನಾನು ನೋಡಿದ ಹಾಗೆ ಕನಿಷ್ಠ ಬೆಳಗ್ಗೆ ೮. ೧೫ ರಿಂದ ಸಂಜೆ ೫.೩೦ ರವರೆಗೂ ಕಠಿಣ ದುಡಿಮೆ ಮಾಡುತ್ತಿರುವ ಆ ಗುಂಪಿನ ಜನರ ಮುಖದಲ್ಲಿ ಸ್ವಲ್ಪವೂ ಕೋಪ, ದುಃಖ ನಾನು ನೋಡಿಲ್ಲ. ಆಯಾಸದೆಡೆಯಲ್ಲೂ ನಗುಮೊಗದಿಂದ ಕೂಡಿರುತ್ತಾರೆ. "ಬಾಲ ಕಾರ್ಮಿಕತನ ನಿಷೇಧಿಸಲಾಗಿದೆ" ಅಥವಾ "ಬಾಲಕಾರ್ಮಿಕತನ ಮುಕ್ತ ಜಿಲ್ಲೆ" ಎಂಬ ಬರಹವನ್ನು ಮನೆ-ಮನೆಯ ಬಾಗಿಲಲ್ಲಿ ಅಂಟಿಸಿದ ಮಾತ್ರಕ್ಕೆ ದೇಶ ಉದ್ದಾರ ಮಾಡಲು ಸಾಧ್ಯವಿಲ್ಲ ಎಂಬುದನ್ನು ರಾಜಕಾರಣಿಗಳು ಮತ್ತು ಅಧಿಕಾರಿ ವರ್ಗ ಮೊದಲು ಮನಗಾಣಬೇಕು. ಮಣ್ಣಲ್ಲಿ ದುಡಿದು, ಮಣ್ಣಲ್ಲಿ ಮಲಗುವ ಈ ಶ್ರಮಿಕರೇ ಮಣ್ಣಿನ ಮಕ್ಕಳು, ಹೊರತಾಗಿ ಮೂರು ಹೊತ್ತು ಮೃಷ್ಟಾನ್ನ ಉಂಡು, ಹಾಸಿಗೆಯಲ್ಲಿ ಮಲಗಿ ಕಾಲ ಹರಣ ಮಾಡುವವರು ಮಣ್ಣಿನ ಮಕ್ಕಳೆನಿಸಲು ಯೋಗ್ಯರಲ್ಲ. ವೇತನ ಹೆಚ್ಚಳಕ್ಕೆ, ನಿರುದ್ಯೋಗ ಸಮಸ್ಯೆಗೆ ಮುಂತಾದ ವಿಷಯಗಳಿಗೆ ಹೋರಾಡುವ ಮುನ್ನ ಒಮ್ಮೆ ಯೋಚಿಸೋಣ ಸರಕಾರ ನಮಗೆ ಆಧಾರ್ ಚೀಟಿ, ಪಡಿತರ ಚೀಟಿ, ಸರಕಾರಿ ಶಾಲೆಗಳನ್ನಾದರೂ ನೀಡಿದೆ. ಆದರೆ ಮೇಲೆ ಪ್ರಸ್ತಾಪಿಸಿದ ಜನರಿಗೆ ಏನೆಲ್ಲಾ ನೀಡಿದೆ.
ಮಕ್ಕಳ ಸಂಖ್ಯೆಯ ಕೊರತೆ ಎನ್ನುತ್ತಾ ಸರಕಾರ ಸರಕಾರೀ ಶಾಲೆಗಳನ್ನು ಮುಚ್ಚುತ್ತಿದೆ. ಆದರೆ ಶಾಲೆ ಎಂದರೆ ಏನೆಂದೇ ಗೊತ್ತಿಲ್ಲದ ಒಂದು ವಿಭಾಗ ಕರ್ನಾಟಕದಾದ್ಯಂತ ಇದೆ. ಸರಕಾರದ ಕಣ್ಣ ಮುಂದೆಯೇ ಅನಕ್ಷರಸ್ಥ ತಲೆಮಾರುಗಳು ಬೆಳೆದು ಬರುತ್ತಿದೆಯಾದರೂ ಸರಕಾರ, ಅಧಿಕಾರಿಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.
ಸಮಾಜ ಕಲ್ಯಾಣ ಯೋಜನೆಗಳ ವೈಫಲ್ಯಕ್ಕೆ ಸುಳ್ಯ - ಕೋಲ್ಚಾರ್ ರಸ್ತೆ ಬದಿಯ ಕಾರ್ಮಿಕರೇ ನೇರ ನಿದರ್ಶನ. ಅವರು ಇಂದು ಇಲ್ಲಿ ನಾಳೆ ಮತ್ತೆ ಇಲ್ಲಿಯೋ.........
|| ಅಭಿಜಿತ್.ಕೆ.ಜೆ ||
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ