ಕರೋನ ಜಗತ್ತಿನ ಯಾವುದೋ ಮೂಲೆಗೆ ಬಂತು, ನಮ್ಮ ದೇಶಕ್ಕೆ ಬಂತು, ನಮ್ಮ ರಾಜ್ಯಕ್ಕೂ ಬಂತು, ನಮ್ಮ ಜಿಲ್ಲೆಗೂ ಬಂತು, ನಮ್ಮ ಹಳ್ಳಿಗೂ ಬಂತು, ಸದ್ಯ ನಮ್ಮ ಮನೆಯ ಬಾಗಿಲಿನಲ್ಲಿದೆ. ಈಗಾಗಲೇ ಅದು ನಮ್ಮಲ್ಲಿ ಹಲವರ ಮನೆಯನ್ನೂ ಸೇರಿದೆ. ಏನೂ ಮಾಡಲಾಗದೆ, ಮೌನದಿ ಕುಳಿತುಕೊಳ್ಳಲೂ ಆಗದೆ ಇಡೀ ಜಗತ್ತು ದ್ವಂದ್ವಕ್ಕೆ ಸಿಲುಕಿದೆ. ಏನಾದರೂ ಮಾಡದೆ ಉಳಿಗಾಲವಿಲ್ಲ ಎಂಬುದು ನಮಗೆಲ್ಲರಿಗೂ ಅರ್ಥವಾಗಿದೆ. ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಯಿತು. ಆರ್ಥಿಕತೆ ನಿಶ್ಚಲವಾಯಿತು. ದಿನನಿತ್ಯದ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದ ಮುಗ್ಧರು ಹೊಟ್ಟೆಗೆ ಬಟ್ಟೆಕಟ್ಟಬೇಕಾಯಿತು. ತನ್ನ ಕಾಲ ಮೇಲೆ ನಿಂತು ದುಡಿದು ಸ್ವಾಭಿಮಾನದಿಂದ ದುಡಿದು ತಿನ್ನುತ್ತಿದ್ದ ಬಡವರು ತುತ್ತು ಅನ್ನಕ್ಕಾಗಿ ಭಿಕ್ಷೆ ಬೇಡಬೇಕಾಗಿ ಬಂತು. ಇದೆಲ್ಲಾ ಯಾರ ತಪ್ಪು..??? ರಾಜಕೀಯದಲ್ಲಾದರೆ ವಿರೋಧ ಪಕ್ಷದವರು, ಆಡಳಿತ ಪಕ್ಷದ ವೈಫಲ್ಯ ಎನ್ನಬಹುದು. ಆದರೆ ಸಮಸ್ತ ಮಾನವ ಸಮುದಾಯದ ದೃಷ್ಟಿಯಿಂದ ಅವಲೋಕಿಸಿದಾಗ ನಾವೆಲ್ಲಾ ಆಡಳಿತ ಪಕ್ಷದವರೇ ಅಲ್ಲವೇ...? ಹಾಗಾದರೆ ನಮ್ಮ ಪಾಲಿಗೆ ವಿರೋಧ ಪಕ್ಷ ಎಂದರೆ ಯಾರು? ಎಲ್ಲಿನವರು? ಅದೆಲ್ಲಾ ವ್ಯರ್ಥ ಪ್ರಶ್ನೆ. ಈ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ, ಕಳೆದ ಕ್ಷಣ ಎಲ್ಲವೂ ವಿಧಿ ಲಿಖಿತ ಎಂದು ಕೈತೊಳೆದುಕೊಳ್ಳುವುದು ಉಚಿತ. ಹಾಗೆಂದು ನಮ್ಮ ಭವಿಷ್ಯವನ್ನು ವಿಧಿಗೆ ಮಾರಿಕೊಳ್ಳಬೇಡಿ. ನಮ್ಮ ಭವಿಷ್ಯ ನಮ್ಮ ಕೈಯಲ್ಲೇ ಇದೆ. ನಮ್ಮ ಪ್ರಯತ್ನಕ್ಕೆ ವಿಧಾತ ಒಲಿಯದೆ ಇರುತ್ತಾನೆಯೋ...? ಖಂಡಿತಾ ಒಲಿಯುತ್ತಾನೆ..
ಕರೋನ ಕಾಲದ ಶಿಕ್ಷಣ ಕ್ಷೇತ್ರದ ಸ್ಥಿತಿ-ಗತಿಯನ್ನು ಒಮ್ಮೆ ಅವಲೋಕಿಸೋಣ...
ವಿದೇಶದ ಕತೆಯೇನು ಅಂತ ನನಗೆ ಗೊತ್ತಿಲ್ಲ. ಯಾಕೆಂದರೆ ನಾನೊಬ್ಬ ವಿದೇಶಿಯಲ್ಲ, ಸ್ವದೇಶಿ...😜. 2019 ರಲ್ಲಿ ಸರಕಾರಕ್ಕೆ ಸಲ್ಲಿಕೆಯಾದ ನೂತನ ಶಿಕ್ಷಣ ನೀತಿಯನ್ನು 2020 ರಲ್ಲಿ ಸರಕಾರ ಸಾರ್ವಜನಿಕರ ಪರಿಗಣನೆಗೆ ಪ್ರಕಟಿಸಿತು. ನೂತನ ಶಿಕ್ಷಣ ನೀತಿಗೆ ವಿವಿಧ ಮೂಲಗಳಿಂದ ಪ್ರಶಂಸೆಗಳು ಬಂದವು. ಸಾಮಾನ್ಯ ಎಂಬಂತೆ, ಹಲವೆಡೆ ಪ್ರತಿಭಟನೆಗಳೂ ನಡೆಯಿತು. ಅದು ನಮ್ಮ ವಿಷಯ ಅಲ್ಲ. ಶಿಕ್ಷಣ ನೀತಿಯ ಪ್ರಮುಖ ಅಂಶಗಳಲ್ಲಿ, ನಾನಾ ಕಾರಣಗಳಿಂದ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದವರನ್ನು ಕಂಡುಹಿಡಿದು ಅವರನ್ನು ಶಿಕ್ಷಣ ಪಥಕ್ಕೆ ಸೇರಿಸುವುದು ಕೂಡ ಒಂದಾಗಿದೆ. ಬಹುಷಃ ಈ ಅಂಶಕ್ಕೆ ಯಾರದ್ದೂ ವಿರೋಧ ಇರದು. ಆದರೆ ಇದನ್ನು ಕೂಡ ವಿರೋಧಿಸಿದರು. ಅದೇ ಕರೋನ ಸ್ವರೂಪಿಯಾದ ವಿಧಿ. ಸರಕಾರ ಶಿಕ್ಷಣವಂಚಿತರಿಗೆ ಹೊಸ ಅವಕಾಶ ತೆರೆದಿಟ್ಟಾಗ, ಕರೋನ ಎಲ್ಲಾ ಶಿಕ್ಷಣಾರ್ಥಿಗಳನ್ನು ಮನೆಯೊಳಗೆ ಕೂಡಿಹಾಕಿತು. ಹಾಗೆಂದು ನಮ್ಮ ಸಮಾಜ ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಭೌತಿಕ ತರಗತಿ ಅಸಾಧ್ಯ ಎಂದು ಶಿಕ್ಷಣವನ್ನೇ ನಿಲ್ಲಿಸಿದರೆ, ಭವಿಷ್ಯದಲ್ಲಿ ಅದರ ಪರಿಣಾಮ ಊಹಿಸಲಾಗದು. ನೂತನ ಶಿಕ್ಷಣ ನೀತಿಗೆ ಪರ್ಯಾಯವೋ ಅಥವಾ ಅನಿವಾರ್ಯವೋ ಗೊತ್ತಿಲ್ಲ, ಆದರೆ ಆನ್ಲೈನ್ ಶಿಕ್ಷಣ ನೀತಿ ಜ್ಯಾರಿಗೊಂಡಿದೆ. ಗುರುಕುಲ ಶಿಕ್ಷಣ ಪದ್ದತಿ ಪ್ರಾಚೀನವಂತೆ, ವಿದ್ಯಾಲಯ ಶಿಕ್ಷಣ ಪದ್ಧತಿ ನಿಷಿದ್ಧ ಅಂತೆ. ಹಾಗಾದರೆ ಇನ್ನು ಗೃಹ ಶಿಕ್ಷಣ ಪದ್ಧತಿ. ಅಷ್ಟೇ...! ಎಲ್ಲಾ ರಾಜ್ಯ ಸರಕಾರಗಳು, ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು ಆನ್ಲೈನ್ ಶಿಕ್ಷಣಕ್ಕೆ ಶರಣು ಎಂದು ಘೋಷಿಸಿದರು. ಆದರೆ ಆನ್ಲೈನ್ ಎಂಬ ಪದದ ಅರ್ಥವನ್ನೂ ಗ್ರಹಿಸದ ಶಿಕ್ಷಣತಜ್ಞರು, ಶೈಕ್ಷಣಿಕ ಸಲಹೆಗಾರರು ಹೇಗೆ ಆನ್ಲೈನ್ ಶಿಕ್ಷಣವನ್ನು ಮುನ್ನಡೆಸಿಯಾರು? ದೇಶದ ನಗರಗಳಲ್ಲಿ, ಖಾಸಗಿ ಶಾಲೆ-ಕಾಲೇಜುಗಳಲ್ಲಿ ಗೂಗಲ್ ಮೀಟ್, ಸೂಂ ಮೊದಲಾದ ಆನ್ಲೈನ್ ವೇದಿಕೆಗಳಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿದೆ. ಆನ್ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವೆ ಭೌತಿಕ ಭೇಟಿ ಇಲ್ಲದಿದ್ದರೂ ದ್ವಿಮುಖ ಸಂವಾದಕ್ಕೆ ಅವಕಾಶ ಇದೆ. ಅಂದರೆ ಶಿಕ್ಷಕರು ವಿದ್ಯಾರ್ಥಿಯೊಂದಿಗೆ ಪ್ರಶ್ನೆಗಳನ್ನು ಕೇಳಬಹುದು, ವಿದ್ಯಾರ್ಥಿ ತನ್ನ ಸಂಶಯಗಳನ್ನು ಹಂಚಿಕೊಳ್ಳಬಹುದು, ಇತ್ಯಾದಿ. ಹಾಗಾಗಿ ಆನ್ಲೈನ್ ಶಿಕ್ಷಣದಲ್ಲಿ ಭೌತಿಕ ತರಗತಿಗಳಿಗೆ ಹೋಲಿಸಿದರೆ ವಿದ್ಯಾರ್ಥಿಗಳು 60 ಶೇಕಡ ಆದರೂ ಪ್ರಯೋಜನ ಪಡೆದುಕೊಳ್ಳುವರು. ಆದರೆ ನಮ್ಮ ಗ್ರಾಮೀಣ ಭಾರತದಲ್ಲಿ, ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳದ ಖಾಸಗಿ ಶಾಲಾ-ಕಾಲೇಜುಗಳು ಕೂಡ ಅನಿವಾರ್ಯವಾಗಿ ಡಿಜಿಟಲ್ ಶಿಕ್ಷಣವನ್ನು ಆನ್ಲೈನ್ ಶಿಕ್ಷಣ ಎಂಬ ಹೆಸರಿನಲ್ಲಿ ನಡೆಸುತ್ತದೆ ಎಂಬುದು ಖೇದಕರ ಸಂಗತಿ. ಡಿಜಿಟಲ್ ಶಿಕ್ಷಣ ಅಂದರೆ ಅಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿ ನಡುವೆ ಭಾವನೆಗಳನ್ನು, ಸಂಶಯಗಳನ್ನು ಹಂಚಿಕೊಳ್ಳಲು ಮುಕ್ತ ಅವಕಾಶ ಇಲ್ಲ. ಶಿಕ್ಷಣವು ಶಿಕ್ಷಕ ಕೇಂದ್ರೀಕೃತವಾಗುತ್ತದೆ. ವಿದ್ಯಾರ್ಥಿಗಳ ನಡುವೆ ಮಿಥ್ಯಾಭೇಟಿ (Virtual Meet) ಗೂ ಅವಕಾಶ ಇಲ್ಲ. ಹಾಗಾಗಿ ಡಿಜಿಟಲ್ ಶಿಕ್ಷಣವು ಯಾಂತ್ರಿಕ ಶಿಕ್ಷಣವೆನ್ನಬಹುದು. ಡಿಜಿಟಲ್ ಶಿಕ್ಷಣದ ಪರಿಣಾಮವಾಗಿ ಹಲವಾರು ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಪ್ರಗತಿ ಕಳೆದುಕೊಳ್ಳಬಹುದು, ಹಲವಾರು ಮಂದಿ ತರಗತಿಗಳನ್ನು ಅರ್ಥೈಸಲೂ ಆಗದೆ ಕಷ್ಟಪಡಬಹುದು, ತಮ್ಮನ್ನು ಗಮನಿಸಲು ಯಾರೂ ಇಲ್ಲ ಎಂದು ಹಲವಾರು ಮಂದಿ ಶಿಕ್ಷಣವನ್ನು ನಿಲ್ಲಿಸಲೂಬಹುದು. ಇದರ ಪರಿಣಾಮವಾಗಿ ವಿದ್ಯಾರ್ಥಿಗಳಲ್ಲಿ ಖಿನ್ನತೆ ಉಂಟಾಗುವ ಸಂಭವವೂ ಹೆಚ್ಚು. ನೆಟ್ವರ್ಕ್ ಸಮಸ್ಯೆ ಎಂಬ ಕುಂಟುನೆಪವೊಡ್ಡಿ ವಿದ್ಯಾರ್ಥಿಗಳ ಆನ್ಲೈನ್ ಶಿಕ್ಷಣದ ಹಕ್ಕನ್ನು ಕಸಿಯುವುದು ಸರಿಯಲ್ಲ. ಆನ್ಲೈನ್ ತರಗತಿಗಳನ್ನು ರೆಕಾರ್ಡ್ ಮಾಡಿ ಡಿಜಿಟಲ್ ರೂಪದಲ್ಲೂ ವಿದ್ಯಾರ್ಥಿಗಳಿಗೆ ಕಳುಹಿಸುವುದು ಇಂದು ದೊಡ್ಡ ಖರ್ಚಿನ ವಿಷಯವೂ ಅಲ್ಲ, ಕ್ಲಿಷ್ಟಕರ ತಂತ್ರಜ್ಞಾನವೂ ಅಲ್ಲ. ಆನ್ಲೈನ್ ಮೂಲಕ ಸಾಧ್ಯ ಆಗುವವರು ಆನ್ಲೈನ್ ಮೂಲಕ ಭಾಗವಹಿಸುತ್ತಾರೆ. ಉಳಿದವರು ಸಾಧ್ಯ ಆದಾಗಲೆಲ್ಲ ನೆಟ್ವರ್ಕ್ ಸಿಗುವ ಪ್ರದೇಶಕ್ಕೆ ಹೋಗಿ ಪಾಠ ಕೇಳುತ್ತಾರೆ. ಅದು ಸಾಧ್ಯವಾಗದಿದ್ದರೆ, ಆನ್ಲೈನ್ ತರಗತಿಯ ರೆಕಾರ್ಡ್ನ್ನು ಕೇಳುತ್ತಾರೆ. ಅನಿವಾರ್ಯ...!!
ಡಿಜಿಟಲ್ ಕ್ಲಾಸನ್ನು ಡೌನ್ಲೋಡ್ ಮಾಡಲು ಮರ ಹತ್ತುವ, ಗುಡ್ಡ-ಬೆಟ್ಟವನ್ನು ಏರುವ ಅಥವಾ ಕಿಲೋಮೀಟರ್ಗಟ್ಟಲೆ ನಡೆಯುವ ವಿದ್ಯಾರ್ಥಿಗಳು ನಮ್ಮ ನಡುವೆ ಅನೇಕ...
ಪ್ರಶ್ನಿಸುವವರು ಯಾರು..??
ಉತ್ತರ ಕೊಡುವವರು ಯಾರು..??
ಸ್ಪಂದಿಸುವವರು ಯಾರು...??
ಎಲ್ಲದಕ್ಕೂ ಉತ್ತರ.... ವಿಧಿ..!!!
ಸತ್ಯ ಅಭಿಜಿತ್ ಅವರೇ, ಸೂಚಿಸಿದ ಅಷ್ಟು ವಿಷಯಗಳು ಅನುಭವಿಸುತ್ತಿರುವಂತದ್ದು ಹಾಗೂ ನಾವು ಸಹಿಸಿಕೊಳ್ಳುತ್ತಿರುವಂತದ್ದು.
ಪ್ರತ್ಯುತ್ತರಅಳಿಸಿನಿಲುವು ತೆಗೆದುಕೊಳ್ಳಬೇಕಾದವರನ್ನು ಪ್ರಶ್ನಿಸಲು ಹೊರಟರೂ, 'ಅವರು ವಿಧಿಯನ್ನು ದೂರಬಹುದು' ಎನ್ನುವ ಅಸಹಾಯಕತೆ ಕಾಡುತ್ತದೆ.
ಅದೂ ವಿಧಿ..!! 😜
ಅಳಿಸಿ